April 20, 2014

ಅರ್ಥಶಾಸ್ತ್ರ –ಸಂಸದ ತಜ್ಙ ಪ್ರೊ ಕೆ.ವೆಂಕಟಗಿರಿಗೌಡ

ಅರ್ಥಶಾಸ್ತ್ರದಲ್ಲಿ ತಜ್ಙರಾದ ಕೆಲವರು ಭಾರತದ ಸಂಸತ್ತಿನ ಸದಸ್ಯರಾಗಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್, ಪ್ರಧಾನಿ ಡಾ.ಮನಮೋಹನ್ ಸಿಂಗ್,ಪಿ.ಚಿದಂಬರಂ, ಪ್ರಣವ್ ಮುಖರ್ಜಿ,ಅರುಣ್ ಶೌರಿ ಇವರು ಕೆಲವು ಅರ್ಥಶಾಸ್ತ್ರಜ್ಙರಾಗಿದ್ದ ಸಂಸದರು. ಈ ಗುಂಪಿಗೆ ಕರ್ನಾಟಕದಿಂದ ಸೇರುವ ಹೆಸರು ಪ್ರೊ.ಕೃಷ್ಣದಾಸೇ ವೆಂಕಟಗಿರಿಗೌಡ. ಬೆಂಗಳೂರಿನ ಬೈರಪಟ್ಟಣದಲ್ಲಿ ಜನಿಸಿದ ಅವರು ಮೈಸೂರು ವಿವಿಯಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದ ನಂತರ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ 1956ರಲ್ಲಿ ಪಿ.ಹೆಚ್‌ಡಿ ಪಡೆದರು. ಅಲ್ಲಿ ಗೌಡರು ‘ಹಣದುಬ್ಬರ’ ಕುರಿತು ಸಂಶೋಧನೆ ಮಾಡುವಾಗಲೇ ಪ್ರತಿಷ್ಠಿತ ಲಾರ್ಡ್ ಲೆವರ್ ಹುಲ್ಮೆ ಪ್ರಶಸ್ತಿಗಾಗಿ ಆಯ್ಕೆಯಾದರು. ಮೈಸೂರು ವಿವಿಯಲ್ಲಿ ಲೆಕ್ಚರರ್, ರೀಡರ್ ಆಗಿದ್ದ ಗೌಡರು 1967ರಲ್ಲಿ ಬೆಂಗಳೂರು ವಿವಿಯಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕ ಮತ್ತು ವಿಭಾಗದ ಮುಖ್ಯಸ್ಥರಾಗಿದ್ದರು. 1983ರಲ್ಲಿ ನಿವೃತ್ತರಾದ ಬಳಿಕ 1984ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿ.ಎಸ್.ಕೃಷ್ಣ ಅಯ್ಯರ್ ವಿರುದ್ಧ ಸೋತಿದ್ದರು. ಇವರು ಮತ್ತೆ 1991ರಲ್ಲಿ 10ನೇ ಲೋಕಸಭೆಗೆ ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸಿ ಬೆಂಗಳೂರು ದಕ್ಷಿಣದಿಂದ ಆಯ್ಕೆಯಾದರು. ಬಿಜೆಪಿಯಲ್ಲಿ ಇದ್ದರೂ ಇವರು ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಮತ್ತು ಹಣಕಾಸು ಸಚಿವ ಮನಮೋಹನ್ ಸಿಂಗ್ ಅವರ ಉದಾರೀಕರಣದ ಆರ್ಥಿಕ ನೀತಿಯನ್ನು ಮುಕ್ತವಾಗಿ ಹೊಗಳಿದ್ದರು. ಇವರ ಕೆಲವು ಕೃತಿಗಳೆಂದರೆ 'Perestroika and Glasnost for India', 'Fiscal Revolution in India', 'Euro-Dollar Flows and International Monetary Stability', 'Inflation—Appreciation of the Indian Rupee'.‘ಬೈರಪಟ್ಟಣದಿಂದ ಬ್ರಿಟನಿನವರೆಗೆ’ ಇವರ ಆತ್ಮಕತೆ. ಅವರು ಪೆಟ್ರೋ ಡಾಲರ್ ಕುರಿತು ಬರೆದ ಪುಸ್ತಕವು ಎಪ್ಪತ್ತರ ದಶಕದ ಮಧ್ಯ ಭಾಗದಲ್ಲಿ ಭಾರತದ ಒಳಗೆ ಮತ್ತು ವಿದೇಶಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಮೊದಲು ಕಾಂಗ್ರೆಸ್‌ನಲ್ಲಿದ್ದು ನಂತರ ಬಿಜೆಪಿ ಸೇರಿದ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ನಿಂತಿದ್ದ ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರನ್ನು ಚುನಾವಣೆಯಲ್ಲಿ ಸೋಲಿಸಿ ಇವರು ‘ಜೈಂಟ್ ಕಿಲ್ಲರ್’ ಎಂದು ಖ್ಯಾತಿ ಪಡೆದರು. ಮುಂಗೋಪವಿದ್ದ ಇವರು ನೇರ ನಡೆಗೆ ಹೆಸರಾಗಿದ್ದರು. ಒಂದು ಸಂದರ್ಶನದಲ್ಲಿ ಸಂದರ್ಶಕರು ‘ನೀವು ಮುಂಗೋಪಿ ಆದ್ದರಿಂದ ಜನರೊಡನೆ ಹೊಂದಿಕೊಂಡು ಹೋಗಲಾರದವರು ಎನ್ನುವ ಭಾವನೆಯಿದೆಯಲ್ಲ?’ ಎಂದಾಗ ‘ಹೌದು ನಾನು ಮುಂಗೋಪಿ, ಜವಾಹರಲಾಲ್ ನೆಹರುರವರು ಮುಂಗೋಪಿ ಯಾಗಿರಲಿಲ್ಲವೇ?’ ಎಂದು ಮತ್ತೆ ಕೋಪದಲ್ಲೇ ಉತ್ತರಿಸಿದ್ದರು! ರಾಜಕೀಯವಾಗಿ ಮುಂದೆ ಭಿನ್ನ ದಾರಿಗಳನ್ನು ತುಳಿದ ಗೌಡರು ಮತ್ತು ಮನಮೋಹನ್ ಸಿಂಗ್ ಲಂಡನ್‌ನಲ್ಲಿ ಸಹಪಾಠಿಗಳಾಗಿದ್ದರು. 81 ವರ್ಷ ಬಾಳಿದ ಈ ಗೌಡರು ಎರಡು ಸಲ ಒಕ್ಕಲಿಗ ಸಂಘದ ಅಧ್ಯಕ್ಷರಾಗಿದ್ದರು. ಪಾರ್ಲಿಮೆಂಟರಿ ಕಲಾಪಗಳ ಸಂಸ್ಥೆ ಕಾರ್ಯದರ್ಶಿ ಎಂ.ಸಿ.ಶಾಂತಮೂರ್ತಿ ಗೌಡರು ತೀರಿ ಕೊಂಡಾಗ ಅವರ ಸಾವು ಅರ್ಥಶಾಸ್ತ್ರದ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಸಂತಾಪ ವ್ಯಕ್ತಪಡಿಸಿದ್ದರು.

No comments: